ಸುಳ್ಯ ಯಕ್ಷಗಾನ ಕಲಾ ಕಾರ್ಯಗಾರದಲ್ಲಿ ದಿ.ಕೊಳಂಬೆ ಸಂಸ್ಮರಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 18 , 2013
|
ಒಕ್ಟೋಬರ್ 18 , 2013
|
ಸುಳ್ಯ ಯಕ್ಷಗಾನ ಕಲಾ ಕಾರ್ಯಗಾರದಲ್ಲಿ ದಿ.ಕೊಳಂಬೆ ಸಂಸ್ಮರಣೆ
ಸುಳ್ಯ :
ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಳಂಬೆ ಅವರು ಸಾತ್ವಿಕ ಗುಣದಲ್ಲಿ ಅರ್ಥ ಹೇಳುವ ಪ್ರಸಿದ್ಧ ಅರ್ಥ ಧಾರಿ. ಅವರು ಪ್ರತಿ ಪಾತ್ರದಲ್ಲೂ ಪಾತ್ರಕ್ಕೆ ನೈಜ ಗೌರವ ದೊರಕಿಸಿಕೊಟ್ಟು ಅರ್ಥಗರ್ಭಿತವಾಗಿ ಮಾತನಾಡಬಲ್ಲ ವಿದ್ವತ್ ಹೊಂದಿದವರು ಎಂದು ಯಕ್ಷಗಾನ ಕಲಾವಿದ ಯು. ಸುಬ್ರಾಯ ಗೌಡ ಹೇಳಿದರು.
ಶುಕ್ರವಾರ ಇಲ್ಲಿನ ಸ್ನೇಹ ಶಾಲಾ ಆವರಣದಲ್ಲಿ 11 ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ರಾಜ್ಯ ಮಟ್ಟದ ಕಾರ್ಯಾಗಾರದ 2ನೇ ದಿನದ ಕಾರ್ಯಕ್ರಮದಲ್ಲಿ ದಿ. ಕೊಳಂಬೆ ಪುಟ್ಟಣ ಗೌಡ ಅವರ ಸಂಸ್ಮರಣೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಈ ಕಾರ್ಯಾಗಾರ ಬಲಿಪ ನಾರಾಯಣ ಭಾಗವತ ಅವರ ನಿರ್ದೇಶನದಲ್ಲಿ ನಡೆಯುತ್ತಿದೆ. ಕಾವ್ಯಗಳಲ್ಲಿ ಪೌರಾಣಿಕ ಪಾತ್ರ ಚಿಂತನೆ ಭೀಷ್ಮನ ಕುರಿತು ಉಪನ್ಯಾಸ ನೀಡಿದ ಯಕ್ಷ ಸಂಶೋಧಕಿ ಡಾ. ನಾಗವೇಣಿ ಮಂಚಿ ಅವರು ಮಹಾಭಾರತದಲ್ಲಿ ಭೀಷ್ಮನ ಪಾತ್ರ ಮಹತ್ವದ್ದು. ಭೀಷ್ಮನ ಪಾತ್ರಗಳು ಮತ್ತೆ ಮತ್ತೆ ನಮ್ಮ ಕಣ್ಣ ಮುಂದೆ ಬರಬೇಕು. ಭೀಷ್ಮನ ಪಾತ್ರಗಳಲ್ಲಿ ವೌಲ್ಯದ ಒಳ ಅರಿವು ಇತ್ತು ಎಂದರು.
ಮಂಗಳೂರು ಶ್ರೀಕೃಷ್ಣ ಯಕ್ಷ ಸಭಾದ ಅಧ್ಯಕ್ಷ ಕೆ.ಎಸ್. ಕಲ್ಲೂರಾಯ ಅಧ್ಯಕ್ಷತೆ ವಹಿಸಿ ಯಕ್ಷಗಾನದ ಮೂಲ ವೇಷದ ವಿಮರ್ಶೆ ಮತ್ತು ಮಂಥನ ಆಗಬೇಕು. ಆ ಮೂಲಕ ಕನ್ನಡ ಮಾಧ್ಯಮ ಪೋಷಣೆ ಆಗುತ್ತದೆ ಎಂದರು.
ಶನಿವಾರದ ಕಾರ್ಯಕ್ರಮ: ಮಧ್ಯಾಹ್ನ 2ರಿಂದ 5ರವರೆಗೆ ದ್ರೌಪದಿ ಸ್ವಯಂವರ ಯಕ್ಷಗಾನ ಪ್ರದರ್ಶನ ಬಳಿಕ ಧರ್ಮರಾಯ ಪಾತ್ರದ ಬಗ್ಗೆ ಪ್ರೊ. ಎಲ್.ಎನ್. ಸಾಮಗ ಅವರಿಂದ ಉಪನ್ಯಾಸ. ಆ ಬಳಿಕ 6ರಿಂದ 9ರವರೆಗೆ ಗಜನೋಹಿ ಐರಾವತ ಪ್ರಸಂಗ ಪ್ರದರ್ಶನ.
ಕಾರ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪ್ರಸನ್ನ ಐವಾರ್ನಡು ಕಾರ್ಯಕ್ರಮ ನಿರೂಪಿಸಿದರು. ಭೀಷ್ಮೋತ್ಪತ್ತಿ, ಭೀಷ್ಮ ಪ್ರತಿಜ್ಞೆ, ಭೀಷ್ಮ ವಿಜಯ ಪ್ರಸಂಗ ಪ್ರದರ್ಶನ ನಡೆಯಿತು.
ಕೃಪೆ : http://vijaykarnataka.indiatimes.com/
|
|
|